ಬರವಣಿಗೆ, ಒಂದು ಸುಂದರ ಅನುಭವ. ವರ್ಷಗಳೇ ಕಳೆದು ಹೋಗಿತ್ತು, ಮನಸ್ಸಿಟ್ಟು ಬರೆಯದೆ. ನನಗೆ ಬರವಣಿಗೆಯ ಜೊತೆ ಒಂದಿಷ್ಟು ಒಳ ಒಪ್ಪಂದ ಇದೆ. ಯಾವುದೇ ರೀತಿಯ ಹೊರ ಪ್ರಪಂಚದ ಪ್ರಭಾವ ಬೀರದೆ, ಬಹುಮುಖ್ಯವಾಗಿ ಸಾಮಾಜಿಕ ಜಾಲತಾಣ, ಸಿನಿಮಾ, ಯಾರೋ ಬರೆದ ಸಾಲುಗಳು... ಹಾಗಂತ ಮುಖತಃವಾಗಿ ಪರಿಚಯವಾದ ಪ್ರತಿಯೊಂದು ವ್ಯಕ್ತಿ, ಜೀವಿ, ವಸ್ತು, ಸಂಗತಿಗಳಲ್ಲಿ ಜೀವಿಸ ಬಯಸುತ್ತೇನೆ. ಬಹುಶಃ ನಾವು ಜೀವನ ಪೂರ್ತಿ ಯಾವುದೋ ಸಂಕೋಲೆಯ ಸಂತೆಯಲ್ಲಿ ಕಳೆದುಹೋದ ನಮ್ಮನ್ನು ಹುಡುಕುತ್ತಿರುತ್ತೇವೆ. ಅನುಭವದಿಂದ ಮಾಗಿದ ಮನಸ್ಸಿಗೆ ಆ ಹಳೆಯ ನಾವು ಕಂಡರೂ ಕಾಣದಂತೆ ಮಾಡಿ ಹೊಸ ಅಂಗಿ ತೊಟ್ಟ ನಮ್ಮನ್ನೇ ಅಪ್ಪಿಕೊಳ್ಳುವುದು, ಆದರೆ ಹುಡುಕಾಟ ನಿರಂತರ. ಬಹುಶಃ ಈ ಲೌಕಿಕ ಜಗತ್ತಿನಲ್ಲಿ ಇರುವಾಗ, ಇದಕ್ಕೂ ಆಳಕ್ಕಿಳಿದರೆ ಅಪಾಯವೇ ಸರಿ. ನಾನು ಭಗವದ್ಗೀತೆಯಲ್ಲಿ ನಂಬಿದ ಸಾಲುಗಳೆಂದರೆ ನಮಗೆ ಸೇರಬೇಕಾಗಿದ್ದು ನಮಗೆ ಸೇರಿಯೇ ತೀರುವುದು. ಪ್ರಯತ್ನ ಇರಬೇಕು ಅಷ್ಟೇ. ಇದ್ದ ಕೆಲಸ ಬಿಟ್ಟಿದ್ದೆ, ಮುಂದೆ ಏನು ಎಂಬ ಚಿಂತೆ ಮನೆಯಲ್ಲೇ ಬಿಟ್ಟು ಬೀಗ ಹಾಕಿ ಹೊರಟಿದ್ದೆ. ಹೊರಟ ಪಯಣ ಸುಲಭವಿರಲಿಲ್ಲ. ಬಹಳ ದಿನಗಳ ನಂತರ ತಿರುಗಲು ಹೊರಟಿದ್ದೆ. ಕೊನೆಯ ಕ್ಷಣದಲ್ಲಿ ಆದ ಬದಲಾವಣೆಯಿಂದ ಮನೆಯಿಂದ ಹೊರ ಬೀಳಲು ಮನಸ್ಸಿರಲಿಲ್ಲ. ಪ್ರತಿ ಬಾರಿ ನನ್ನ ಸ್ನೇಹಿತರ ಗುಂಪು ಪ್ರವಾಸದ ಬಗ್ಗೆ ಹೇಳಿದಾಗ ಏನೋ ಕುಂಟು ನೆಪ ಹೇಳಿ ತಪ್ಪಿಸಿಕೊಳ್ಳುವೆ ಎಂಬ ಅಪವಾದ ನನ್ನ ಮೇಲಿತ್ತು. ಈ ಬಾರಿ ಏನು ಯೋಚಿಸ...
 ನಾನು ರಾಧೆ
ಎಲ್ಲ ಬಂಧನಗಳ ಎಲ್ಲೆ ಮೀರಿ
ಬಂದೆ ನಿನ್ನ ಸಾನಿಧ್ಯಕೆ
ಹೆಸರಿಡುವ ಅನಿವಾರ್ಯ 
ನಮಗಿರಲಿಲ್ಲ
ನಾ ಕೇಳಲಿಲ್ಲ, ನೀ ಹೇಳಲಿಲ್ಲ
ಉಸಿರಾಯಿತು ಮರ-ಗಿಡ ಝರಿ-ತೊರೆ ಕೊಳಲು

ಜಗದ ಸಂತೆಯಲಿ ಕಿತ್ತಾಡುವರು ಸದಾ ನಮ್ಮ ಕುರಿತೆ
ಮನಬಂದಂತೆ ಹಚ್ಚುವರು ಬಂಧನದ ಬಣ್ಣ
ಉತ್ತರ ಎಲ್ಲದಕ್ಕೂ ಕೊಟ್ಟೆ, ಎಲ್ಲರಿಗೂ ಕೊಟ್ಟೆ ನೀನು
ನನ್ನ ಹೆಸರಿಗೆ ಮಾತ್ರ, ಒಮ್ಮೆ ಮುಗುಳ್ನಗೆ, ದೀರ್ಘ ಮೌನ

ನಾ ಬಲ್ಲೆ ನಿನ್ನ ಅಂತರಂಗದಾಳ
ನನಗೆ ಕಾರಣ ಎಂದೂ ಬೇಕಿಲ್ಲ
ಲೋಕದ ಕಣ್ಣಿಗೆ ನಾನೆಂದೋ ಮರುಳೆಯಾಗಿಹೆ
ಸವೆಸಿಬಿಡುವೆ ಜೀವ ನಿನ್ನ ಕೊಳಲದನಿಯಿಂಪಲ್ಲೆ

ಯಾರಿಗೂ ಸೋಲದಿರು, ನ್ಯಾಯಕ್ಕೆ ತಲೆಬಾಗು
ನನ್ನ ನೆನಪು ಎಂದೂ ಕಾಡದಿರಲಿ
ಉಸಿರಿರುವ ತನಕ ಇಲ್ಲಿಯೇ ಕಾಯುವೆ
ನಿನ್ನ ಭೂತದಲ್ಲೆ ನಾ ಕಾಲ ಕಳೆವೆ

ಪ್ರಶ್ನೆಯೇ ಇರಲಿ ಇವರಿಗೆಲ್ಲಾ...

ರಾಧೆ...🎶

Comments

Popular posts from this blog