ಬರವಣಿಗೆ, ಒಂದು ಸುಂದರ ಅನುಭವ. ವರ್ಷಗಳೇ ಕಳೆದು ಹೋಗಿತ್ತು, ಮನಸ್ಸಿಟ್ಟು ಬರೆಯದೆ. ನನಗೆ ಬರವಣಿಗೆಯ ಜೊತೆ ಒಂದಿಷ್ಟು ಒಳ ಒಪ್ಪಂದ ಇದೆ. ಯಾವುದೇ ರೀತಿಯ ಹೊರ ಪ್ರಪಂಚದ ಪ್ರಭಾವ ಬೀರದೆ, ಬಹುಮುಖ್ಯವಾಗಿ ಸಾಮಾಜಿಕ ಜಾಲತಾಣ, ಸಿನಿಮಾ, ಯಾರೋ ಬರೆದ ಸಾಲುಗಳು... ಹಾಗಂತ ಮುಖತಃವಾಗಿ ಪರಿಚಯವಾದ ಪ್ರತಿಯೊಂದು ವ್ಯಕ್ತಿ, ಜೀವಿ, ವಸ್ತು, ಸಂಗತಿಗಳಲ್ಲಿ ಜೀವಿಸ ಬಯಸುತ್ತೇನೆ. ಬಹುಶಃ ನಾವು ಜೀವನ ಪೂರ್ತಿ ಯಾವುದೋ ಸಂಕೋಲೆಯ ಸಂತೆಯಲ್ಲಿ ಕಳೆದುಹೋದ ನಮ್ಮನ್ನು ಹುಡುಕುತ್ತಿರುತ್ತೇವೆ. ಅನುಭವದಿಂದ ಮಾಗಿದ ಮನಸ್ಸಿಗೆ ಆ ಹಳೆಯ ನಾವು ಕಂಡರೂ ಕಾಣದಂತೆ ಮಾಡಿ ಹೊಸ ಅಂಗಿ ತೊಟ್ಟ ನಮ್ಮನ್ನೇ ಅಪ್ಪಿಕೊಳ್ಳುವುದು, ಆದರೆ ಹುಡುಕಾಟ ನಿರಂತರ. ಬಹುಶಃ ಈ ಲೌಕಿಕ ಜಗತ್ತಿನಲ್ಲಿ ಇರುವಾಗ, ಇದಕ್ಕೂ ಆಳಕ್ಕಿಳಿದರೆ ಅಪಾಯವೇ ಸರಿ. ನಾನು ಭಗವದ್ಗೀತೆಯಲ್ಲಿ ನಂಬಿದ ಸಾಲುಗಳೆಂದರೆ ನಮಗೆ ಸೇರಬೇಕಾಗಿದ್ದು ನಮಗೆ ಸೇರಿಯೇ ತೀರುವುದು. ಪ್ರಯತ್ನ ಇರಬೇಕು ಅಷ್ಟೇ. ಇದ್ದ ಕೆಲಸ ಬಿಟ್ಟಿದ್ದೆ, ಮುಂದೆ ಏನು ಎಂಬ ಚಿಂತೆ ಮನೆಯಲ್ಲೇ ಬಿಟ್ಟು ಬೀಗ ಹಾಕಿ ಹೊರಟಿದ್ದೆ. ಹೊರಟ ಪಯಣ ಸುಲಭವಿರಲಿಲ್ಲ. ಬಹಳ ದಿನಗಳ ನಂತರ ತಿರುಗಲು ಹೊರಟಿದ್ದೆ. ಕೊನೆಯ ಕ್ಷಣದಲ್ಲಿ ಆದ ಬದಲಾವಣೆಯಿಂದ ಮನೆಯಿಂದ ಹೊರ ಬೀಳಲು ಮನಸ್ಸಿರಲಿಲ್ಲ. ಪ್ರತಿ ಬಾರಿ ನನ್ನ ಸ್ನೇಹಿತರ ಗುಂಪು ಪ್ರವಾಸದ ಬಗ್ಗೆ ಹೇಳಿದಾಗ ಏನೋ ಕುಂಟು ನೆಪ ಹೇಳಿ ತಪ್ಪಿಸಿಕೊಳ್ಳುವೆ ಎಂಬ ಅಪವಾದ ನನ್ನ ಮೇಲಿತ್ತು. ಈ ಬಾರಿ ಏನು ಯೋಚಿಸ...
ಅವಳೊಂತರಾ...

ಚೈತ್ರ ಮಾಸ ಕಾಲಿಟ್ಟು ತಿಂಗಳು ಕಳೆದಿತ್ತು. ಪ್ರತಿ ಬಾರಿ ಮಕ್ಕಳಿಗೆ ರಜೆ ಇದ್ದರೂ ರಜೆಯಲ್ಲ. ಆ class ಈ class ಅಂತಾ ಬಾಲ್ಯದ ನೆನಪುಗಳನ್ನೆಲ್ಲಾ ಈ ಹೊಗೆ ಚಕ್ರಕ್ಕೆ ಹಾಕಿ ತಿರುಗಿಸುತ್ತಾರೆ. ಈ ಬಾರಿ ರಜೆಯಲ್ಲಿ  ಮಕ್ಕಳನ್ನ ಊರಿಗೆ ಕೊಂಡೊಯ್ಯುವ ಉಪಾಯವೇನೋ ಹಾಕಿಕೊಂಡೆ, ಇವರಪ್ಪ ಒಪ್ಪಬೇಕು, ಶಶಿ ಕಂಪ್ಯೂಟರ್‌ ಬಿಟ್ಟು ಕದಲಬೇಕು!! ಅಮ್ಮಳಿಂದ ನೂರು ಬಾರಿ ಕರೆ ಬಂದಿತ್ತು. ಎಂದು ಬರುವೆ, ಹೇಗೆ ಬರುವೆ??.. ಆದಿಯನ್ನ ಒಪ್ಪಿಸಿದೆ. ಅವನಿ ತುದಿಗಾಲಲ್ಲಿ ಇದ್ದಳು ಅಲ್ಲಿ ಮಣ್ಣಿನ ಅಡುಗೆ ಮನೆ ಆಡಲು, ಬೆಟ್ಟ, ಗುಡ್ಡ, ತೋಟ ತಿರುಗಲು. ಊರ ಮಕ್ಕಳ ಹೆಸರನ್ನ, ಅವರು ಯಾವ class ಲಿ ಓದುತ್ತಿದ್ದಾರೆ ಎನ್ನುವುದನ್ನ ಅಜ್ಜಿ ಹತ್ತಿರ ಕೇಳಿ, ಕೇಳಿ ಉರು ಹಾಕುತ್ತಿದ್ದಾಳೆ. ಶಶಿಗೆ ಬಸ್ ಬುಕ್ ಮಾಡುವಾಗ ಕೊನೆಯದಾಗಿ ಕೇಳಿದೆ. 'ನೋಡು ನಾವು ಹೋಗ್ತಿರೊದು ಪಕ್ಕಾ.. ಬರೊದಿದ್ರೆ ಬಾ ಇಲ್ಲಾ ರಜಾ ಪೂರ್ತಿ ನಿನ್ನ ಕಂಪ್ಯೂಟರ್‌ ಮುಂದೆ ಇರು, ಹಸಿವಾದಾಗ ಏನ್ ಬೇಕೊ ಮಾಡಿಕೊಂಡು ತಿನ್ನು. ನಾವು ಅಜ್ಜಿ ಕೈ ರುಚಿಯನ್ನ ಸವಿತಿವಿ.' ಸುಮಾರು ಹೊಟ್ಟೆ ಉರಿಸಿ ಬಸ್ ಬುಕ್ ಮಾಡಿ ಬ್ಯಾಗ ಪ್ಯಾಕ್ ಮಾಡತೊಡಗಿದೆ. ಈ ಅವನಿಯ ಸಾಮಾನುಗಳು ಸುಮಾರಿಗೆ ಸಾಕಾಗಲ್ಲ. 'ಅಮ್ಮ ಇದು ಶ್ರೀ ಗೆ, ಇದು ಇಶಾಗೆ,....' ಅವಳ ಉಡುಗೊರೆ ಸಾಮಾನು ಉದ್ದಕೆ ಬೆಳೆಯುತ್ತಲೆ ಇತ್ತು. ಸಾಕು ಮಾರಾಯ್ತಿ ಅಂದರೂ ಇಲ್ಲಾ, ಕಳೆದ ಬಾರಿ ಸಿಕ್ಕಾಗ ಅವಳ ಗ್ಯಾಂಗ್ ನವರು ತಮ್ಮ ಇಷ್ಟ ಕಷ್ಟ ತಿಳಿಸಿದ್ದನ್ನೆಲ್ಲಾ ಆ ಪುಟ್ಟ ತಲೆಲಿ ಹೇಗೆ store ಮಾಡ್ಕೊತಾಳೊ. ಈಗ ಒಂದೊಂದೆ ಹೊರ ಬರ್ತಿದೆ, ಕಳೆದ ಬಾರಿ ಭರ್ಜರಿ shopping ಮಾಡಿದ್ದು ಇದಕ್ಕಾಗಿ ಕಳ್ಳಿ. ನಾನು ಇದೆಲ್ಲಾ ತನಗೆ ಬೇಕೆಂದು ತೆಗೆದುಕೊಂಡಿದ್ದಾಳೆ ಎಂದುಕೊಂಡಿದ್ದೆ. ಅಷ್ಟರಲ್ಲಿ ಶಶಿ ಕಳ್ಳ ಹೆಜ್ಜೆ ಇಡುತ್ತ ' ಏನ್ ಮಾಡ್ತಿದಿಯಾ, ನೀನು ಪುಟ್ಟಿ ಇಬ್ಬರು ಹೋಗ್ತಿರಾ..? ಹೇಗೆ ಎತ್ತ' ಎನ್ನುತ್ತ ಬಂದ. 'ಹೌದು, ಬಸ್ಸಲ್ಲಿ. ಬುಕ್ ಆಗಿದೆ' ಎಂದೆ. ಯಾವಾಗ ವಾಪಸ್ ಬರ್ತೀರಾ?.. ಎಂದ ಬೇಸರದಿಂದ ನೋಡುತ್ತಾ.. 'ಗೊತ್ತಿಲ್ಲಾ.., ರಜಾ ಮುಗಿಸಿ??!..' ಎಂದು ತಲೆ ಎತ್ತದೆ ಹೇಳಿದೆ. 'ಹುಂ' ಎಂದು ಪೆಚ್ಚು ಮುಖ ಹಾಕಿ ನಿಧಾನ ಹೊರ ನಡೆದ. ಇವಳು ಅಣ್ಣನಿಗೆ ಹವಾ ಹಾಕ್ತಿದ್ದಳು. ನನಗೂ ಇವ ಬಂದರೆ ನೆಮ್ಮದಿ, ಇಲ್ಲವಾದರೆ ಅಲ್ಲಿ ಹೋಗಿಯೂ ಹೋಗದಂತೆ. ಹೊತ್ತೊತ್ತಿಗೂ ಊಟ ಮಾಡಿದನೋ ಇಲ್ಲವೋ, ಆದಿಗೆ ತೊಂದರೆ ಕೊಡುವನೊ ಏನೊ ಎಂಬ ಚಿಂತೆಯಲ್ಲೇ ದಿನಕಳೆವುದು. ಇವನಿಗೂ ಟಿಕೆಟ್ ಬುಕ್ ಮಾಡಿದ್ದೆ, ಬರದಿದ್ದಲ್ಲಿ ಕೊನೆಗೆ cancel ಮಾಡಿದರಾಯಿತೆಂದು. ಅಣ್ಣ ತಂಗಿ ಏನು ಮಾತನಾಡಿಕೊಂಡರೊ, ಮತ್ತೆ ಕಳ್ಳ ಬೆಕ್ಕುಗಳು ರೂಮಿಗೆ ಬಂದವು. ಅಮ್ಮ jackfruit ಇವಾಗ ಇರತ್ತಾ?... ಮತ್ತೆ ಪೀಠಿಕೆ... ನಾನು ಅವ ಕೇಳಿದ ಪ್ರಶ್ನೆಗೆಲ್ಲಾ  ಹಾ, ಹು , ಎನ್ನುತ್ತಿದ್ದೆ. ಅವನಿಗೆ ನಾನು ಮತ್ತೆ ಕರೆಯಲಿ ಎಂಬ ಬಯಕೆ. ಅತ್ತಿಂದಿತ್ತ ಬಾಲ ಸುಟ್ಟ ಬೆಕ್ಕಂತೆ ತಿರುಗ ತೊಡಗಿದರು. ಬಳಿಕ ಅವನಿ ಕಿವಿಯಲ್ಲಿ ಉಸುರಿದಳು, 'ಅವನು ಬರ್ತಾನೆ,' ಅವಳ ಖುಷಿಗೆ ಅದು ತುಸು ಜೋರಾಗಿಯೇ ಕೇಳಿತು. ಅವನು ತಲೆ ಎತ್ತಿ, ನಾನು ಬರ್ಲಾ ಎಂದು ನುಲಿಯುತ್ತಾ ಮಡಿಲೇರಿದ. ಬಾಚಿ ಮುತ್ತಿಟ್ಟೆ. ಇವಳು ಅವನ ಡ್ರೆಸ್ ಎಲ್ಲಾ ತೆಗೆದು ಅಮ್ಮಾ ಇದು ಬೇಕು, ಇದು ಬೇಕು ಎಂದು ಎತ್ತಿ ಎತ್ತಿ ಒಗೆಯ ತೊಡಗಿದಳು. ಅವಳ ಕಾಲು ಅರ್ಧ ಇಂಚು ನೆಲಕ್ಕಿಂತ ಮೇಲಿತ್ತು.
ನಾನು ಮನೆ ಬಿಡುವಾಗ ಆದಿ officeನಿಂದ ಇನ್ನು ಬಂದಿರಲಿಲ್ಲ. ಕ್ಯಾಬ್ ಬುಕ್‌ ಮಾಡಿ ಲಗೇಜ್ ಎಲ್ಲಾ ಹೊರಗಿಟ್ಟೆ. ಅವನಿ ಎದುರುಗಡೆ ಆಂಟಿ ಬಾಗಿಲು ತಟ್ಟುತ್ತಿದ್ದಳು. ಅವರಿಗೂ ಇವಳೆಂದರೆ ಪ್ರೀತಿ. ಒಮ್ಮೆ ಎಲ್ಲಾ ನೆನಪಿಸಿಕೊಂಡು door lockಮಾಡಿದೆ. ಶಶಿ ಬ್ಯಾಗನ್ನೆಲ್ಲಾ ಬೇಡವೆಂದರು ಲಿಫ್ಟನೆಡೆಗೆ ಸಾಗಿಸುತ್ತಿದ್ದ. ಅವನಿ ಆಂಟಿ ಜೊತೆ ಕುಶಲೋಪರಿಯಲ್ಲಿ ತೊಡಗಿದ್ದಳು. ನಾನು ಹೋಗುವ ವಿಷಯ ಗೊತ್ತಿದ್ದ ಕಾರಣ ಬೇಗ ವಿದಾಯ ಹೇಳಿದರು. ಇವಳ ಮಾತು ಎಂದೂ ಮುಗಿಯದು.ಒಮ್ಮೆ ಎತ್ತಿ ಮುದ್ದಿಟ್ಟರು. ಏನೇನೊ order ಕೊಟ್ಟಳು ಅವಳ ಆಂಟಿಗೆ. ಕ್ಯಾಬ್ ಹತ್ತಿ ಆದಿಗೆ ಫೋನಾಯಿಸಿದೆ. ಅವನು busy ಇದ್ದ. 'ಸರಿ , ತಲುಪಿದ ಮೇಲೆ ಕಾಲ್ ಮಾಡಿ' ಎಂದು ವಿದಾಯ ಹೇಳಿದ‌. ಇವರಿಬ್ಬರು ಬಾಯ್ ಬಾಯ್ ಎಂದು ಕಿರುಚಿದ್ದಕ್ಕೆ, ಡ್ರೈವರ ತಿರುಗಿ ನೋಡಿದ. ಏನೋ ಖುಷಿ, ಆದಿಯೂ ಬಂದಿದ್ದರೆ ಎಂದು ಅನ್ನಿಸಿತು‌. ಅವನಿ ಹುಟ್ಟಿದ ಬಾಣಂತನದ ನಂತರ ಇದೇ ಮೊದಲು ಇಷ್ಟು ದಿನಗಳಿಗೆ ಹೋಗುತ್ತಿರುವುದು. ಅವಳಿಗೆ ೫ ವರ್ಷ ಈಗ. ಇಬ್ಬರನ್ನ ನಾನೊಬ್ಬಳೆ ಕರೆದೊಯ್ಯುತ್ತಿರುವುದು ಇದೇ ಮೊದಲು. ಅಮ್ಮನ ಕಾಲ್. Cut ಮಾಡಿದೆ. ಬಸ್ಸೇರಿ ಹೊರಟಿದ್ದನ್ನ ತಿಳಿಸಿದೆ‌. ನನಗೆ ಗೊತ್ತು ಇವತ್ತು ರಾತ್ರಿಯಿಡಿ ನಿದ್ರಿಸಿಲ್ಲ ಅಮ್ಮ. ಗಡಿಯಾರ ನೊಡುತ್ತಲೆ ಬೆಳಗು ಮಾಡುವಳು. ನಿಜವಾಗಿಯೂ ಹೌದು ಅಮ್ಮನಾದ ಮೇಲೆ ಅಮ್ಮನ ನಿಜ ಪ್ರೀತಿಯ ಆಳ ತಿಳಿವುದು. ಯಾವಾಗ ಎಲ್ಲಾ ಜಂಜಾಟಗಳನ್ನ ಅವಳ ಮಡಿಲಲ್ಲಿ ಕರಗಿಸುವೆ ಎಂದು ಕೊಳ್ಳುತ್ತಾ ಮಗ್ಗಲು ಬದಲಾಯಿಸುತ್ತಲೇ ಗಂಟೆ ೩ ಆಗಿತ್ತು. ಇವರಿಬ್ಬರೂ ಹಾಯಾಗಿ ಮಲಗಿದ್ದರು. ಅವನಿ ಆಗಾಗ ಅವಳಪ್ಪನ್ನ ಕನವರಿಸುತ್ತಿದ್ದಳು‌ ನಿದ್ದೆಯಲ್ಲೇ. ಅಪ್ಪನ ಮುದ್ದಿನ ಮಗಳು!!. ಸುಮಾರು ೬ ಕಾಲಿಗೆ ನನ್ನೂರು ತಲುಪಿದೆ. ಇವಳು ಎದ್ದವಳು ಅಮ್ಮ ಬ್ರಶ್!! ವಾಸನೆ ಬರ್ತಿದೆ ಎಂದು ಶುರುವಿಟ್ಟುಕೊಂಡಳು. ಬಸ್ಸಿಳಿದು ಲಗೇಜ್ ಹಿಡಿದು ಇಬ್ಬರನ್ನೂ ಬಸ್ ನಿಲ್ದಾಣಕ್ಕೆ ಕರೆದೊಯ್ಯುವಷ್ಟರಲ್ಲಿ ಸಾಕಾಗಿತ್ತು. ಅಷ್ಟರಲ್ಲಿ ನನ್ನ class mate ಶೀನು ಸಿಕ್ಕಿದ. ತುಂಬಾ ಆತ್ಮೀಯತೆಯಿಂದ ಮಾತನಾಡಿಸಿದ. ಮಕ್ಕಳಿಬ್ಬರಿಗೂ chocolateತಂದು ಕೊಟ್ಟ. ಅಷ್ಟರಲ್ಲಿ ಬಸ್ಸು ಬಂತು. ಬಸ್ಸು ಹತ್ತಿಸಿ ಹೋದ. ನಾನು ಅವನ ಕುರಿತು ಏನು ಕೇಳಲೇ ಇಲ್ಲ, ಹೋದ ನಂತರ ಅನ್ನಿಸಿತು. ಎಷ್ಟೊಂದು ಬದಲಾಗಿದ್ದಾನೆ‌. ೫ ನೇ class ಲಿ ನಂಗೆ love letterಬರ್ದಿದಾನೆ ಎಂದು ಹೆಡ್ ಮೇಷ್ಟ್ರ ಹತ್ರ  ಹೊಡ್ಸಿದ್ದೆ. ಆಮೇಲೆ ಎಷ್ಟೋ ವರ್ಷ ಮಾತೇ ಆಡಿರಲಿಲ್ಲ. ಅವನದು ಮದುವೆ ಆಗಿದೆ ಎಂದು ಅಮ್ಮಾ ಹೇಳಿದ್ದರು ಯಾವಾಗಲೋ. ಅಮ್ಮಾ peacock ಎಂಬ ಶಶಿ ಕೂಗು ಎಚ್ಚರಿಸಿತು. ಹೌದಲ್ಲೋ ಚಿನ್ನು, ಇದೆಲ್ಲಾ miss ಮಾಡ್ಕೊತಿದ್ದೆ ಅಲ್ವಾ ನೀನು, ನೋಡು ಎಷ್ಟು ಚೆನ್ನಾಗಿದೆ ಸುತ್ತ ಮುತ್ತ' ಎಂದೆ. ಅವನಿಗೆ ನಿದ್ದೆ ಹೋಗಿರಲಿಲ್ಲ. ಆಗಾಗ ಕಣ್ಣು ಬಿಟ್ಟು ನೋಡಿ ಮತ್ತೆ ನಿದ್ದೆ ಹೋಗುತ್ತಿದ್ದಳು‌. ಅಮ್ಮ ಬಸ್ ನಿಲ್ದಾಣದಲ್ಲಿ ಬರುಕಾಯುತ್ತ ನಿಂತಿದ್ದಳು. ಅವಳ ಕಂಗಳ ಹೊಳಪೇ ಹೇಳುತ್ತಿತ್ತು ಅವಳ ಉತ್ಸುಕತೆಯನ್ನ. ಒಂದೊಂದೆ ಸಾಮಾನು ಇಳಿಸಿಡುವಷ್ಟರಲ್ಲಿ ಅಜ್ಜಿ ಎಂದು ಓಡಿ ಹೋಗಿ ಕತ್ತಿಗೆ ಜೋತು ಬಿದ್ದಳು. ಮೊಮ್ಮಗಳನ್ನ ಮುತ್ತಿನಿಂದ ಸಿಂಗರಿಸಿದಳು. ಶಶಿಯನ್ನ ನೋಡುತ್ತಿದ್ದಂತೆ  ಮುಖ ಸ್ವಲ್ಪ ಕಳೆಗುಂದಿತು.
ಅಮ್ಮ, 'ಆದಿಯು ಬಂದಿದ್ರೆ ಚೆನ್ನಾಗಿತ್ತು, ಪಾಪ ರಜೆ ಎಲ್ಲಿ ಅವನಿಗೆ ಎಂದು ಸಮಾಧಾನ ಪಟ್ಟುಕೊಂಡರು. ಅಬ್ಬಾ ನೀವಾದರು ಬಂದ್ರಲ್ಲಾ, ಬೆಳಗ್ಗೆ ಪರಮು ಮನೆಗೆ ಹೋದೆ ನಿನ್ನ ಕರ್ಕೊಂಡು ಬರೋಕೆ ಹೇಳೋಣ ಎಂದು, ಅವನು ತೋಟಕ್ಕೆ ಹೋಗಿದ್ದ.' ಎಂದು ಅಲವೊತ್ತು ಕೊಂಡರು‌. 'ಅಮ್ಮ ಎಷ್ಟು ದೂರ? Morning walk ಆಗುತ್ತೆ, ಏ ಇಬ್ರು ಹುಷಾರು,' ಎನ್ನುತ್ತಾ ಚೀಲ ಎತ್ತಿದೆ. ಬೇಡವೆಂದರು ಅಮ್ಮ ಒಂದು ಚೀಲ ಎತ್ತಿದರು. 'ಅಮ್ಮಾ last time ಬಂದಾಗ ಇದು ಚಿಕ್ಕ ಇತ್ತು, ಈಗ ನೋಡು ಮಾವಿನಕಾಯಿ!!! ಎಷ್ಟೊಂದಿದೆ. ಅಜ್ಜಿ ಕೊಯ್ದಿದ ಇದೆಯಾ?', ಮನೆಯ ಸುತ್ತ ಮುತ್ತಲಿನ ಬದಲಾವಣೆಗಳನ್ನ ಒಂದೊಂದಾಗಿ ಶಶಿ ಪ್ರಶ್ನಿಸುತ್ತಾ ಸಾಗುವಷ್ಟರಲ್ಲಿ ಮನೆ ಬಂತು. ಅಷ್ಟರಲ್ಲಿ ಸಣ್ಣಿ ಬಾಗಿಲಿಗೆ ಬಂದಳು 'ಅಯ್ಯೋ ಯಾವ ಕಾಲ ಆಗಿತ್ತು ನಿನ್ನ ನೋಡಿ ನನ್ನವ್ವಾ...' ಎಂದು ಲಟಿಗೆ ಮುರಿದಳು. ಅವನಿಯನ್ನ ಎತ್ತಿ 'ದುಷ್ಟಿ ಬಟ್ಟಿಡು, ಕೆಟ್ಟ ಕಣ್ಣು ಬಿದ್ದೀತು' ಎಂದು ಎಚ್ಚರಿಸಿದಳು. ನಾನು ಸುಮ್ಮನೆ ಮುಗುಳ್ನಕ್ಕು ಒಳಗಡಿ ಇರಿಸಿದೆ. Fresh ಆಗಿ ಬರುವಷ್ಟರಲ್ಲಿ ಬಿಸಿ ಬಿಸಿ ದೋಸೆ ಕಾಯಿ ಚಟ್ನಿ, ಗಟ್ಟಿ ಮೊಸರು, ಬೆಲ್ಲ, ಚಟ್ನೆಪುಡಿ, ಇತ್ಯಾದಿ ಸಾಲು ಗಟ್ಟಿತ್ತು. ದಿನವೂ ಹೀಗಿರಬಾರದಿತ್ತೆ, ಬಿಸಿ ಬಿಸಿ ಹಬೆಯಾಡುವ ದೋಸೆ, ಸಾಕೆಂದರೂ ಒತ್ತಾಯಿಸಿಡುವ ಪರಿ. ನಿತ್ಯ ಗಡಿಬಿಡಿಯಲ್ಲಿ ಈ ಅಪ್ಪ ಮಕ್ಕಳನ್ನು ತಯಾರು ಮಾಡಿ ಡಬ್ಬಿ ತುಂಬಿ ಉಸಿರಾಡುವ ಹೊತ್ತಿಗೆ ಹಸಿವು ಮೀರಿ ಏನೋ ತಿಂದರಾಯಿತೆಂಬ ತಾತ್ಸಾರ ಬಂದುಬಿಡುತ್ತದೆ. ಆದಿ ಇವತ್ತು ಅದು ಚೆನ್ನಾಗಿದೆ ಇದು ಚೆನ್ನಾಗಿದೆ ಹೇಳಿದ್ದೆಲ್ಲಾ ಲಕ್ಷ್ಯಕ್ಕೆ ಬಾರದಾಗಿರುತ್ತದೆ.ಇವರಿಬ್ಬರೂ ಹಠ ಮಾಡದೆ ಸುಮ್ಮನೆ ಪಂಕ್ತಿಯಲ್ಲಿ ಕುಳಿತರು. ಅಮ್ಮನ ತೆಳ್ಳಗಿನ ಗರಿ ಗರಿ ದೋಸೆ ಒಂದೊಂದೆ ಬೀಳುತ್ತಿತ್ತು, ಲೆಕ್ಕವಿರಲಿಲ್ಲ. ಅವನಿ ಬರಿ ಚಟ್ನೆಪುಡಿ ತಿನ್ನುವುದರಲ್ಲಿ ಮಗ್ನ. ತಿಂಡಿ ಸ್ನಾನ ಮುಗಿಸಿ ಹೊರ ಬಂದಿದ್ದೆ ತಡ ಶಶಿ ಕೊಂಡಿ ಕಳಚಿದ ಹೋರಿಯಂತೆ, ಗೆಳೆಯರ ಬಳಗ ಹುಡುಕಿ ಹೊರಟ. ಅವನಿ ಬಳಿ ಬಂದು, ಅಮ್ಮಾ ನಾನು ಬರುವ ವಿಷಯ ಅಜ್ಜಿ ಯಾರಿಗೂ ಹೇಳಿಲ್ವಾ, ತನು, ಇಷಾ ಯಾರೂ ಬಂದೆ ಇಲ್ಲಾ, ಅಣ್ಣ ಹೋದ ದಾರಿ ನೋಡುತ್ತ ಕೇಳಿದಳು. ಅವಳು ತಂದ ಸಾಮಾನುಗಳು ಕಾದಿದ್ದವು. 'ಬರ್ತಾರೆ, ಈಗ ಸ್ವಲ್ಪ ನಿದ್ದೆ ಮಾಡು, ರಾತ್ರಿ ಸರಿ ನಿದ್ದೆ ಆಗಿಲ್ಲಾ ಬಂಗಾರಿ, ಮಧ್ಯಾಹ್ನ ನಾವು ಹೋಗೋಣ ಇಷಾ ಮನೆಗೆ' ಎನ್ನುತ್ತಾ ಪುಸಲಾಯಿಸಿ ನಿದ್ದೆ ಮನೆಗೆ ಕಳಿಸಿದೆ. ಅಮ್ಮ ಅಡುಗೆ ತಯಾರಿಯಲ್ಲಿ ತೊಡಗಿದ್ದರು. ಮನೆಯ ಸುತ್ತ ಕಣ್ಣಾಡಿಸಿದೆ. ಚಿಕ್ಕಂದಿನಿಂದ ಬೆಳೆದ ಪರಿಸರ, ಹೇಳಿಕೊಳ್ಳುವಂತ ಒಳ್ಳೆ ನೆನಪುಗಳೇನು ಇಲ್ಲಾ. ಮತ್ತೆ ಆ ಹಳೆ ನೆನಪುಗಳು ಕೊಲ್ಲಲು ಬಿಡದಂತೆ ಅಮ್ಮ ಕರೆದಳು. ಶಶಿಯನ್ನ ಈ ಬಿರು ಬಿಸಿಲಿನಲ್ಲಿ ಕಳಿಸಿದ್ದೀಯ ಏನೆನ್ನಲಿ ಎಂದು ತುಸು ಜೋರಾಗೆ ಕೇಳಿದರು. ಅವರ ಮಾತಿನ ಆಳ ಅರ್ಥ ತಿಳಿಯದವಳೇನಾಗಿರಲಿಲ್ಲ. ನಾನು ಮರು ಮಾತನಾಡುವ ಸಾಹಸ ಮಾಡಲಿಲ್ಲ. ಊಟ ಮುಗಿಸಿ ಒಮ್ಮೆ ಇವಳ ಸ್ನೇಹಿತೆಯರ ಮನೆಗೆ ಲಗ್ಗೆ ಇಟ್ಟಳು ಉಡುಗೊರೆ ಸಾಮಾನುಗಳ ಜೊತೆ. ಈಗ ನಾನು ಅಮ್ಮನ ಹೊರತಾಗಿ ಮನೆಯಲ್ಲಿ ಯಾರು ಇರುತ್ತಿರಲಿಲ್ಲ. ದಿನ ಪೂರ್ತಿ ಊರ ಮೇಲೆ ಕಳೆಯುತ್ತಿದ್ದರು ಅಣ್ಣ ತಂಗಿ ಇಬ್ಬರೂ. ಅಂದು ಸಂಜೆ  ಅವನಿ ಬಂದವಳು 'ಅಮ್ಮಾ ಅಜ್ಜಿ ಕೆಟ್ಟವಳಾ? ಕೆಟ್ಟ..' ನಾನು ಅವಳ ಬಾಯಿ ಮೇಲೆ ಕೈಯಿಟ್ಟೆ. ಸುತ್ತಲೂ ನೋಡಿದೆ. ಅಮ್ಮನ ಸುಳಿವಿರಲಿಲ್ಲ. ಅಬ್ಬಾ ಎಂದು ಉಸಿರು ಬಿಟ್ಟೆ. 'ಯಾರು ಹೀಗೆಲ್ಲಾ ಹೇಳಿದ್ದು? ಅಜ್ಜಿ ದೊಡ್ಡವರು ಅಲ್ವಾ, ದೇವರ ಸಮಾನ. ತಪ್ಪಾಯಿತೆಂದು ದೇವರಿಗೆ ನಮಸ್ಕರಿಸಿ ಬಾ' ಎಂದೆ. 'ಪಕ್ಕದ ಮನೆ ತೇಜು ಅಜ್ಜಿ. ಅವರು ದೊಡ್ಡವರು, ಸುಳ್ಳು ಯಾಕೆ ಹೇಳಿದ್ರು??' ಈ ಮುದ್ದು ಬಂಗಾರಿಯ ಮುಗ್ದ ಪ್ರಶ್ನೆಗೆ ಉತ್ತರ ಕೊಡುವುದು ಕಷ್ಟ, ಕೊಟ್ಟರೆ ಅರ್ಥ ಮಾಡಿಕೊಳ್ಳುವ ವಯಸ್ಸು ಅಲ್ಲಾ. 'ಬಾ ಜಾಣಾ, ದೇವರಿಗೆ ನಮಸ್ಕರಿಸಿ ಇನ್ಮೇಲೆ ಹಾಗೆಲ್ಲ ಕೇಳಲ್ಲಾ ತಪ್ಪಾಯ್ತು ಅಂತಾ ಹೇಳು' ಎಂದೆ. ಉದ್ದಕೆ ನಮಸ್ಕರಿಸಿದಳು. 'ಇನ್ಮೇಲೆ ಕೇಳಲ್ಲಾ sorry ಅಮ್ಮ' ಎಂದಳು. ಸುಸ್ತಾಗಿ ಮಲಗಿದಳು ಗೊಂಬೆ. ನನ್ನ ನೆನಪುಗಳ ಬತ್ತಿ ಹಚ್ಚಿ ...

ಅಮ್ಮನಿಗೆ ವಯಸ್ಸು ಎಷ್ಟಾಗಿರಬಹುದು? ನನಗಿಂತ ೨೫ ಹೆಚ್ಚು, ಮದುವೆಯಾಗಿ ೧೦ ವರ್ಷಗಳ ನಂತರ ನಾನು ಹುಟ್ಟಿದ್ದಂತೆ. ಅಜ್ಜಿ ಅಪ್ಪನಿಗೆ ಮರುಮದುವೆ ಮಾಡುವ ಪ್ರಯಾಸದಲ್ಲಿದ್ದರಂತೆ. ಆಗ ನನ್ನ ಆಗಮನವಾಯಿತಂತೆ. ಅದಕ್ಕೆ ಖುಷಿ ಪಡುವ ಸಮಯದಲ್ಲೇ ಅಮ್ಮ ವಿಧವೆಯಾದರು. ತೋಟಕ್ಕೆ ಸೋಗೆ ಬಾಚಲು ಹೋದ ಅಪ್ಪ ಹಿಂತಿರುಗಿ ಬಾರದ ಲೋಕಕ್ಕೆ ಪಯಣಿಸಿದ್ದ ಹಾವು ಕಡಿದು. ನಾನು ಅನಿಷ್ಟವಾದೆ ಮನೆಯವರಿಗೆಲ್ಲಾ, ಅಮ್ಮನ ಹೊರತಾಗಿ. ಅಮ್ಮನಿಗೆ ಮುಂಡನ ಮಾಡಿಸಬೇಕೆಂದು ಎಲ್ಲಾ ಹಾತೊರೆದಿದ್ದರಂತೆ. ಅಮ್ಮನದೊ ಹೆಸರಿಗೆ ತಕ್ಕಂತೆ ನಾಗವೇಣಿ. ದೊಡ್ಡಪ್ಪ ಆ ಗೊಡ್ಡು ಸಂಪ್ರದಾಯ ಬೇಡ ಎಂದು ವಿರೋಧಿಸಿದರಂತೆ‌. ಮನೆಯಲ್ಲಿ ದೊಡ್ಡಪ್ಪ ದೊಡ್ಡಮ್ಮನದೆ ದರ್ಬಾರ್. ಅಮ್ಮ ಮನೆಯ ಕೆಲಸದವಳಾಗಿದ್ದಳು. ನಾನಾಗ ನಾಲ್ಕೈದು ವರ್ಷದವಳಿದ್ದೆನೇನೊ. ದೊಡ್ಡಮ್ಮನಿಗೆ ಇದ್ದಕ್ಕಿದ್ದ ಹಾಗೆ ಇಲ್ಲದ ಪ್ರೀತಿ ನನ್ನ ಮೇಲೆ. ತೋಟಕ್ಕೆ ಊರು ಸುತ್ತಲು ನಾ ಒಲ್ಲೆ ಎಂದರೂ ಕರೆದೊಯ್ಯುವರು. ಅಮ್ಮ ತನ್ನೊಡನಿರು ಎಂದು ಕೇಳಿಕೊಳ್ಳುವಳು. ನನಗೆ ಹೊಸದಾದ ದೊಡ್ಡಮ್ಮನ ಪ್ರೀತಿ ಹೆಚ್ಚಾಯಿತು, ಅವರೊಡನೆಯೆ ಮಲಗುತ್ತಿದ್ದೆ. ಅಮ್ಮ ಒಮ್ಮೊಮ್ಮೆ ಒಬ್ಬಳೇ ಕುಳಿತು ಅಳುತ್ತಿದ್ದಳು. ನಾನು ಯಾಕೆ ಎಂದು ಕೇಳಿದಾಗಲೆಲ್ಲ 'ನಿಮ್ಮಪ್ಪನಿದ್ದಲ್ಲಿಗೆ ನಾನು ಹೋಗಿದ್ದರೆ ಚೆನ್ನಾಗಿ ಇತ್ತು ಅಲ್ವಾ' ಎನ್ನುವಳು. ಏನೋ ಅಸಾಯಕತೆಯ ಉತ್ತರ ಅದಾಗಿತ್ತು ಎಂದು ಅರಿವಾವಾಗಲು ಬಹಳ ವರ್ಷವಾಗಿತ್ತು. ಅದೊಂದು ದಿನ ನಾನು ದೊಡ್ಡಮ್ಮ ತೋಟದಿಂದ ಮನೆಗಡಿ ಇಡುತ್ತಿರುವಾಗ ಜೋರು ಜೋರಾಗಿ ಮಾತು ಕೇಳಿ ಬಂತು. ಅಮ್ಮ ಬಿಳಿ ಸೀರೆಯ ಸೆರಗು ತುದಿ ಬಾಯಿಗೆ ಒತ್ತಿದ್ದಳು. ಯಾಕೊ ಭಯವಾಗಿ 'ಅಮ್ಮಾ ಏನಾಯಿತು' ಎಂದು ಅವಳ ಬಳಿ ನಡೆದ ನನ್ನನ್ನ ಅಜ್ಜಿ ಎತ್ತಿ 'ಆ ಹೊಲತಿ ಬಳಿ ನೀ ಹೋಗ ಬೇಡ, ಕುಟುಂಬಕ್ಕೆ ಮಸಿ ಬಳಿದಳು ನಿನ್ನಮ್ಮ. ನೋಡೆ ಜಾನಕಿ ನಿನ್ನ ತಂಗಿ ಬಸುರಿ, ... ' ಬರಬಾರದ ಪದಗಳೆಲ್ಲಾ ಅವತ್ತು ಕೇಳಿದೆ. ನಂಗೆ ಖುಷಿ ಆಗಿತ್ತು,ತಮ್ಮ ಬರುವನೆಂದು. ಅಮ್ಮನ ಬಳಿ ನನಗೂ ತಮ್ಮ ಬೇಕೆಂದಾಗಲೆಲ್ಲ, ಅಸಾಧ್ಯ  ಎನ್ನುತ್ತಿದ್ದರು. ಈಗ... ಎಲ್ಲಾ ಅಮ್ಮನಿಗೇಕೆ ಬಯ್ಯುತ್ತಿರುವುದು?? ಅರ್ಥವಾಗಲಿಲ್ಲ. ದೊಡ್ಡಮ್ಮ ವಿಚಿತ್ರವಾಗಿ ಆಡುತ್ತಿದ್ದಳು. ಅವಳಿಗೆ ಅಮ್ಮನ ದೃಷ್ಟಿ ಅಜ್ಜಿಯ ಮಾತು ಅರಗಿಸಿಕೊಳ್ಳದಾಗಿದ್ದಳು. ಅಷ್ಟರಲ್ಲಿ ದೊಡ್ಡಪ್ಪ 'ಪಂಚರನ್ನ ಕರೆ ತಂದೆ ಅಮ್ಮಾ' ಎಂದ ತಲೆ ತಗ್ಗಿಸಿ. ಅಮ್ಮ ಅದೇ ಮೊದಲ ಬಾರಿಯಾಗಿರಲಿಲ್ಲವಂತೆ, ಅಜ್ಜಿಗೆ ತಿಳಿದಿದ್ದು ಮೊದಲಾಗಿತ್ತಂತೆ. ಸಣ್ಣಿ ಒಮ್ಮೆ ಹೇಳಿದ್ದಳು. ಅವಳು ಅಮ್ಮನ ಕಷ್ಟ ಕಾಲದಲ್ಲಿ ಆದವಳು. ಅಮ್ಮನ ಮೂಕ ರೋದನ ನೋಡಿದ್ದಳು. ಅಮ್ಮ ಒಂದು ಮರು ಮಾತು ಆಡಲಿಲ್ಲ. ಕೇಳಲು ತಾನೆ ಯಾರಿದ್ದರು!!! ಯಾರೂ ಮಗುವಿನ ತಂದೆ ಯಾರೆಂದು ವಿಚಾರಿಸಲಿಲ್ಲ. ಬದಲಿಗೆ 'ಕೇಶ ಮುಂಡನ ನೀ ಆಗ ತಡೆಯದಿದ್ದರೆ, ಈ ಕಳಂಕ ನಿಮ್ಮ ಕುಟುಂಬ ಹೊರ ಬೇಕಿರಲಿಲ್ಲ ಕೇಶವ' ಎಂದರು ಒಬ್ಬ ಪಂಚ ದೊಡ್ಡಪ್ಪನಿಗೆ. ದೊಡ್ಡಪ್ಪನೂ ಪಂಚರಲ್ಲಿ ಒಬ್ಬ!!! 'ಹೌದಾಗಿತ್ತು' ಎಂದು ಗುನುಗಿದ, ತನ್ನದಲ್ಲದ ತಪ್ಪ ತಾವೀಗ  ಹೊರುತ್ತಿರುವೆವು. ಎನ್ನುವ ರೀತಿ. ಅಸಹ್ಯ ಜನ್ಮ!! ಇಂದು ದೊಡ್ಡಪ್ಪ ದೊಡ್ಡಮ್ಮನದು ನನ್ನ ಮೇಲೆ ಎಂದಿಲ್ಲದ ಅತೀವ ಪ್ರೀತಿ. ಇವಳನ್ನ ನಾವೆ ಬೆಳೆಸುವೆವು, ತಾಯಿಯಂತೆ ಮಗಳಾದರೆ? ಎಂದು ಬಾಚಿ ಮುದ್ದು ಮಾಡಿದ. ನೆನಪಿಸಿಕೊಂಡರೆ ಈಗಲೂ ಮೈ ಉರಿಯುತ್ತದೆ. ಅಮ್ಮ ತಲೆ ಎತ್ತಿ ಕೆಂಪಾದ ಕಂಗಳಲಿ ದೊಡ್ಡಪ್ಪನನ್ನು ನೋಡಿದಳು. ದೊಡ್ಡಪ್ಪ ಈಗಲೂ ತಲೆ ಎತ್ತಿ ನೋಡಲಿಲ್ಲ. ನನಗೂ ಭಯವಾಯಿತು. ನಾನು ದೊಡ್ಡಮ್ಮನ ಸೀರೆಯಲ್ಲಿ ಅವಿತೆ.ಎಲ್ಲರ ನಿರ್ಣಯದಂತೆ ಅಮ್ಮ ಮಾರನೆಯ ದಿನ ಊರು ಬಿಡಬೇಕೆಂದು!! ಇಷ್ಟೊತ್ತು ಮೌನದಲ್ಲಿದ್ದ ಅಮ್ಮ ಬಾಯಿ ಬಿಟ್ಟಳು. ದೊಡ್ಡಪ್ಪ ದೊಡ್ಡಮ್ಮ ಕಂಗಾಲಾಗಿದ್ದರು, ಏನು ಹೇಳುವಳೊ ಎಂದು. ನನಗೆ ನನ್ನ ತವರಲ್ಲಿ ಇಟ್ಟ ಒಡವೆ ಕೊಡಿಸಿ ಎಂದಳು.ಒಂದರ್ಧ ಭಾಗ ಕೊಡಲು ಎಲ್ಲಾ ಒಪ್ಪಿದರು. ಉಳಿದರ್ಧ ನನಗೆಂದರು, ಅದು ಎಂದೂ  ನನ್ನದಾಗಲೇ ಇಲ್ಲ. ಆ ರಾತ್ರಿ ಬಲವಂತವಾಗಿ ನನ್ನನ್ನು ದೊಡ್ಡಮ್ಮ ಮಲಗಿಸಿ ಕೊಂಡರು. ಆ ಮಾತುಗಳ ಪ್ರಭಾವಕ್ಕೊ ಏನೋ ಒಂದು ಕೆಟ್ಟ ಕನಸು. ಈಗ ನೆನಪಾದರೂ ಭಯವಾಗುವುದು. ನಾನು ದೊಡ್ಡಮ್ಮನ ಬುಡದಿಂದ ಎದ್ದು ಅಮ್ಮನ ಕೋಣೆಗೆ ಹೋದೆ ಲಾಟೀನು ಹಿಡಿದು. ಅಮ್ಮ ಹಾಗೆ ಮೂಲೆಯಲ್ಲಿ ಕೂತಿದ್ದಳು. ಅಮ್ಮಾ ಎಂದು ಅಳುತ್ತಾ ತಬ್ಬಿಕೊಂಡೆ. ಬಿಗಿದಪ್ಪಿ ಸಮಾಧಾನ ಮಾಡಿದಳು. ಅಮ್ಮ ತಮ್ಮಾ ಬರ್ತಾನಾ ಎಂದೆ. ಏನು ಮಾತನಾಡದೆ ನನ್ನ ತಟ್ಟಿ ಕಾಲ ಮೇಲೆ ಮಲಗಿಸಿ ಕೊಂಡಳು. ರಾತ್ರಿಯಿಡಿ ನಿದ್ರಿಸಲೇ ಇಲ್ಲ ಬಹುಶಃ. ಮರುದಿವಸ ನಾನು ಹೊರಟು ನಿಂತೆ ಅಮ್ಮನ ಜೊತೆ. ಯಾವ ಕಡೆ ನಡೆಯುತ್ತಿದ್ದೆವೆಂದು ಇಬ್ಬರಿಗೂ ಗೊತ್ತಿರಲಿಲ್ಲ. ಅಷ್ಟರಲ್ಲಿ ತಿಮ್ಮಣ್ಣ ಮಾಸ್ತರು ಏದುಸಿರಿಡುತ್ತ ಎದುರಾದರು. 'ನಾಗಕ್ಕ ನಿನ್ನ ನೋಡೊಕೆ ಬಂದೆ, ಸಣ್ಣಿ ಶಾಲೆಯಲ್ಲಿ ವಿಷಯ ತಿಳುಸಿದಳು. ಬಾ ಮನೆಗೆ ಹೋಗೋಣ, ಗಂಗು ಇದಾಳೆ ಮನೆಯಲ್ಲಿ,' ಎಂದರು ಒಂದೇ ಉಸಿರಿಗೆ. ಅಮ್ಮ ಏನು ಹೇಳಲಿಲ್ಲ. ಸುಮ್ಮನೆ ಮುಂದಿನ ದಾರಿ ನೋಡುತ್ತ ನಿಂತಳು. 'ನೀನು ನನಗೆ ತಾಯಿ ತಂಗಿ ಸಮಾನ, ನಿನ್ನ ಕೈ ಊಟ ಎಷ್ಟು ತಿಂದಿಲ್ಲಾ, ಈ ಸಮಯದಲ್ಲಿ, ಮಗಳೂ ಜೊತೆಗಿದ್ದಾಳೆ ಹಠ ಮಾಡಬೇಡ' ಎಂದರು. ಸ್ವಲ್ಪ ಹೊತ್ತು ಅರಳಿ ಮರದ ಕೆಳಗೆ ಕೂತರು. ನಾನು ಇಬ್ಬರನ್ನೂ ಸುಮ್ಮನೆ ನೋಡುತ್ತ ನಿಂತೆ. 'ಸರಿ ಹೋಗೋಣ' ಎಂದು ಹಿಂಬಾಲಿಸಿದಳು. ಅವರ ಮನೆ ತಲುಪಿದಾಗ ಸಂಜೆ. ಆ ಪುಟ್ಟ ಮನೆಯಲ್ಲಿ ನಮ್ಮ ಸಂಸಾರವು ಸೇರಿ ಕೊಂಡಿತು. ಗಂಗತ್ತೆಯದು ಉದಾರ ಮನಸ್ಸು. ನಮಗೆ ಬೇರೆಯವರ ಮನೆ ಎಂಬ ಭಾವ ಸುಳಿಯಗೊಡಲಿಲ್ಲ.
ಅಮ್ಮನಿಗೆ ಅಂದು ಪ್ರಸವ ವೇದನೆ. ನಿದ್ದೆ ಊಟ ಸರಿ ಮಾಡದೆ ಕೃಶವಾಗಿದ್ದಳು. ಅಂತೂ ನನಗೆ ತಮ್ಮ ಬಂದ. ಜೋರಾಗಿ ಅಳುತ್ತಿದ್ದ. ಅಮ್ಮ ಸುಮ್ಮನೆ ಹೆಂಚು ನೋಡುತ್ತ ಮಲಗಿದ್ದಳು. ಯಾವ ಮಗು ಹೇಗಿದೆ ಎಂದು ನೋಡದೆ. ಗಂಗತ್ತೆ ಬುದ್ದಿ ಹೇಳಿದರು, 'ನೋಡು ನಾಗು ಯಾವುದೋ ಕೋಪಕ್ಕೆ ಈ ಹಸುಗೂಸ ಶಿಕ್ಷಿಸ ಬೇಡ. ಏನು ಅರಿಯದು, ಈಗಷ್ಟೇ ಈ ಪ್ರಪಂಚ ನೋಡ್ತಿದೆ, ಅದಕ್ಕೆ ನೀ ಕಣ್ಣಾಗಬೇಕು. ಯಾರದ್ದೊ ಪಾಪ ಇದಕ್ಕೆ ತಟ್ಟದಿರಲಿ,' ಎಂದರು. 'ಏನು ಮಾಡಲಿ, ಅವನ  ಆ ಪಾಪಿ ರಕ್ತ ಇದರಲ್ಲೂ ಹರಿಯುತ್ತಿದೆ, ಮೇಲಾಗಿ ಗಂಡು!!!  ಆ ದುಷ್ಟನಂತಾದರೆ!!' ಆ ನೋವಿನಲ್ಲೂ ಅರಚಿದರು. ಅವಳ ಅಂತರಾಳದ ಕೂಗಾಗಿತ್ತು. ಅವಳ ಭಾವನೆಗೆ ಶಬ್ದಗಳೇ ಕೊರತೆ!!! ಗಂಗತ್ತೆ ಸ್ವಲ್ಪ ಕಾಲ ಸುಮ್ಮನಿದ್ದು ಮುಂದುವರಿಸಿದರು 'ತಂದೆಯ ಸ್ಥಾನ ಅಲಂಕಾರಿಸ ಬೇಕಾದವ ಸಭ್ಯನಂತೆ ಮೆರೆಯುತ್ತಿರುವ, ಅವನಿಗಾವ ಶಿಕ್ಷೆಯೂ ವಿಧಿಸಿಲ್ಲ ನೀನು.. ಏನೂ ಅರಿಯದ ಇದರ ಮೇಲೇಕೆ ವೈಶಮ್ಯ.. ತಂದೆ ಕರ್ತವ್ಯ ನಿಭಾಯಿಸದಿದ್ದರೂ ನಡೆದೀತು ತಾಯಿಯಾದವಳು ನಿಭಾಯಿಸಲೆ ಬೇಕು, ಜಗ ನಡೆಯಲು. ನೀ ಹೀಗೆ ಮಾಡಿದರೆ ಆ ಪಾಪಿಗೆ ತಟ್ಟುವ ಪಾಪ ನಿನಗೂ ತಟ್ಟುವುದಲ್ಲವೇ??' ಎಂದರು. ಅಮ್ಮ ಮೊದಲ ಬಾರಿಗೆ ಗಂಗತ್ತೆಯ ಹೆಗಲೊರಗಿ ಜೋರಾಗಿ ಅತ್ತರು. ಅದೆ ಕೊನೆ, ತಮ್ಮನನ್ನು ಪರಕೀಯನ್ನಾಗಿ ಮಾಡಲಿಲ್ಲ. ಇದ್ದ ಒಡವೆ ಮಾರಿ ಒಂದೆಕರೆ ಜಮೀನು ಖರೀದಿಸಿದಳು. ನಿಧಾನವಾಗಿ ನಮ್ಮದೆ ಆದ ಸೂರು ಕಟ್ಟಿಕೊಂಡೆವು. ತಕ್ಕ ಮಟ್ಟಿಗೆ ಜೀವನ ನಮ್ಮದಾಗಿತ್ತು. ನಾನು ಪ್ರೌಢ ಶಾಲೆಗೆ ಹೋಗುತ್ತಿದ್ದೆ,  ಅವಮಾನಗಳು ಸಾಮಾನ್ಯ ಸಂಗತಿಯಾಗಿತ್ತು, ಸಹಾಯ ಮಾಡದಿದ್ದರೂ ಆಡಿ ಕೊಳ್ಳವರಿಗೆ ಕಮ್ಮಿ ಇರಲಿಲ್ಲ.
ನಾನು ಅಂದು  ಮನೆಗೆ ಬರುವುದು ತುಸು ತಡವಾಗಿತ್ತು. ಮನೆಯ ಮುಂದೆ ಜನ ಸಾಗರ, ಎದೆಯಲ್ಲಿ ಡವ ಡವ!! ಏನಾಗಿರ ಬಹುದೆಂದು. ಹಜಾರದಲ್ಲಿ ಹತ್ತು ವರ್ಷದ ನನ್ನ ತಮ್ಮನ ಶವ!! ಆಡಲು ಹೋದವ ಆಯ ತಪ್ಪಿ ಬಾವಿಗೆ ಬಿದ್ದಿದ್ದ. ನಂಬಲೇ ಆಗುದು.. ಶಾಲೆಗೆ ಹೋಗುವಾಗ ನಾನೇ ಸ್ವತಃ ಬಿಟ್ಟು ಹೋಗಿದ್ದೆ. ಇವನು ಬಿದ್ದಿದ್ದ ನೋಡಿ ಭಯದಿಂದ ಉಳಿದ ಮಕ್ಕಳು ಓಡಿ ಬಂದಿದ್ದರಂತೆ. ಈಜು ಬರುವವರಿಗೆ ಸುದ್ದಿ ತಲುಪುವುದರೊಳಗೆ ಪ್ರಾಣ ಪಕ್ಷಿ ಹಾರಹೋಗಿತ್ತು. ಅಮ್ಮನ ನೋವಿಗೆ ಕೊನೆಯೆ ಇಲ್ಲವೇ, ಪತಿಯಾಯಿತು, ಅವಮಾನಗಳ ಸರಮಾಲೆಯ ಜೊತೆ ಪುತ್ರ ವಿಯೋಗ. ಅಮ್ಮ ಎದೆಗುಂದಲಿಲ್ಲ, ಅಂದು ತನ್ನ ಮೇಲಾದ ಅತ್ಯಾಚಾರವನ್ನ ಪ್ರಶ್ನಿಸಲು ಉಸಿರಿರದವಳು ಇಂದು ಗಟ್ಟಿಗಿತ್ತಿಯಾಗಿದ್ದಳು. ಸಮಯ ಸಂದರ್ಭ ಎಂತವರನ್ನು ಗಟ್ಟಿ ಮಾಡುತ್ತದೆ ಎಂಬುದಕ್ಕೆ ಇವಳು ಜೀವಂತ ಸಾಕ್ಷಿ. ಸಮಾಜದ ಯಾವ ಕಹಿಯು ಈಗ ಇವಳಿಗೆ ನಾಟದಾಗಿತ್ತು. ನಾನು ಡಿಗ್ರಿ ಮುಗಿಸಿ ಒಂದು ಕೆಲಸ ಹಿಡಿದು ಅಮ್ಮನಿಗೆ ನೆರವಾಗುತ್ತಿದ್ದೆ. ಗಂಗತ್ತೆ ತಮ್ಮ ಮಗನಿಗೆ ನನ್ನನ್ನು ಕೇಳಿದಾಗ ಅಮ್ಮ ಪ್ರೀತಿಯಿಂದ ಒಪ್ಪಿದರು. ಆದಿ ಅಪ್ಪ ಅಮ್ಮನ ಒತ್ತಾಯಕ್ಕೆ ನನ್ನ ಮದುವೆ ಆದನೊ ಎಂಬ ಆತಂಕ ಮದುವೆ ದಿನವೇ ದೂರವಾಗಿತ್ತು. ಅಮ್ಮ ಎಷ್ಟಾದರು ನಮ್ಮ ಹೊಸ ಸಂಸಾರ ಪ್ರವೇಶಿಸಲಿಲ್ಲ. ದೂರದಿಂದಲೇ ನೋಡಿ ಸಂತೋಷಿಸಿದಳು. 'ನನ್ನಿಂದ ತಿಳಿಯದೇ ನಿನ್ನ ಮನ ನೋಯಿಸಿದ್ದಲಿ ಕ್ಷಮಿಸಿ ಬಿಡು ಅಮ್ಮ 'ಎಂದು ಮನಸಲ್ಲೇ ಪ್ರಾರ್ಥಿಸಿದೆ.  ಅಷ್ಟರಲ್ಲಿ  ಅವನಿ  ಎದ್ದು ಅಮ್ಮ ಹಾಲು ಬೇಕೆಂದಳು. ನಾನು ಎದ್ದು ಅಡುಗೆ ಮನೆಗೆ ಹೋಗುವಷ್ಟರಲ್ಲಿ 'ಅವನಿಗೆ ಹಾಲು ತಗೊ' ಎಂದು ತಂದು ಕೊಟ್ಟಿತು ತಾಯಿ ಜೀವ. ಅಜ್ಜಿ ಕಥೆ ಹೇಳು ಎಂದು ಮಡಿಲೇರಿದಳು. ಅಷ್ಟರಲ್ಲಿ ಶಶಿಯೂ ಕ್ರಿಕೆಟ್ ಆಡಿ ಬೆವರೊರೆಸುತ್ತಾ ಬಂದ. ಅಮ್ಮ ಇವತ್ತಿನ ಮ್ಯಾಚ್!!! ಏನ  ಕೇಳ್ತಿಯ, ಹೊಟ್ಟಿಗೆ  ಏನಾದರು.... ಎನ್ನುತ್ತಾ ಆ ಮಣ್ಣಿನ ಮೈಲಿ ಬಂದು ಹಿಂದಿಂದ ನೇತು ಬಿದ್ದ. 'ಅಮ್ಮ next time ನಾ ಬರಲ್ಲಾ ಊರಿಗೆ ಅಂದ್ರೆ ಎತ್ತಾಕ್ಕೊಂಡು ಬಾ.'  'ಸರಿ ಈಗ ಸ್ನಾನ ಮಾಡಿ ಬಾ' ಎಂದೆ. ಅಮ್ಮ ಸತಿ ಸಾವಿತ್ರಿಯ ಕತೆ ಹೇಳುತ್ತಿದ್ದಳು ಅವನಿಗೆ. ಅಮ್ಮನಿಗೆ ಇಷ್ಟೆ ಪ್ರೀತಿ ಸಾಕು. ವರ್ಷ ಪೂರ್ತಿ ಈ ನೆನಪಲ್ಲಿ ಕಾಲ ಕಳೆವಳು. ಅವಳ ನೋವೆಲ್ಲಾ ಇವರ ಪುಂಡಾಟದಲ್ಲಾದರೂ ಮರೆಯಲಿ ಎಂಬ ಹರಕೆ ಹೊತ್ತೆ. ಆ ಅಭೂತಪೂರ್ವ ಶಕ್ತಿಗೆ ಎಷ್ಟು ನಮಿಸಿದರೂ ಕಮ್ಮಿ.

ರಾಧೆ...🎶

Comments

Popular posts from this blog