ಬರವಣಿಗೆ, ಒಂದು ಸುಂದರ ಅನುಭವ. ವರ್ಷಗಳೇ ಕಳೆದು ಹೋಗಿತ್ತು, ಮನಸ್ಸಿಟ್ಟು ಬರೆಯದೆ. ನನಗೆ ಬರವಣಿಗೆಯ ಜೊತೆ ಒಂದಿಷ್ಟು ಒಳ ಒಪ್ಪಂದ ಇದೆ. ಯಾವುದೇ ರೀತಿಯ ಹೊರ ಪ್ರಪಂಚದ ಪ್ರಭಾವ ಬೀರದೆ, ಬಹುಮುಖ್ಯವಾಗಿ ಸಾಮಾಜಿಕ ಜಾಲತಾಣ, ಸಿನಿಮಾ, ಯಾರೋ ಬರೆದ ಸಾಲುಗಳು... ಹಾಗಂತ ಮುಖತಃವಾಗಿ ಪರಿಚಯವಾದ ಪ್ರತಿಯೊಂದು ವ್ಯಕ್ತಿ, ಜೀವಿ, ವಸ್ತು, ಸಂಗತಿಗಳಲ್ಲಿ ಜೀವಿಸ ಬಯಸುತ್ತೇನೆ. ಬಹುಶಃ ನಾವು ಜೀವನ ಪೂರ್ತಿ ಯಾವುದೋ ಸಂಕೋಲೆಯ ಸಂತೆಯಲ್ಲಿ ಕಳೆದುಹೋದ ನಮ್ಮನ್ನು ಹುಡುಕುತ್ತಿರುತ್ತೇವೆ. ಅನುಭವದಿಂದ ಮಾಗಿದ ಮನಸ್ಸಿಗೆ ಆ ಹಳೆಯ ನಾವು ಕಂಡರೂ ಕಾಣದಂತೆ ಮಾಡಿ ಹೊಸ ಅಂಗಿ ತೊಟ್ಟ ನಮ್ಮನ್ನೇ ಅಪ್ಪಿಕೊಳ್ಳುವುದು, ಆದರೆ ಹುಡುಕಾಟ ನಿರಂತರ. ಬಹುಶಃ ಈ ಲೌಕಿಕ ಜಗತ್ತಿನಲ್ಲಿ ಇರುವಾಗ, ಇದಕ್ಕೂ ಆಳಕ್ಕಿಳಿದರೆ ಅಪಾಯವೇ ಸರಿ. ನಾನು ಭಗವದ್ಗೀತೆಯಲ್ಲಿ ನಂಬಿದ ಸಾಲುಗಳೆಂದರೆ ನಮಗೆ ಸೇರಬೇಕಾಗಿದ್ದು ನಮಗೆ ಸೇರಿಯೇ ತೀರುವುದು. ಪ್ರಯತ್ನ ಇರಬೇಕು ಅಷ್ಟೇ. ಇದ್ದ ಕೆಲಸ ಬಿಟ್ಟಿದ್ದೆ, ಮುಂದೆ ಏನು ಎಂಬ ಚಿಂತೆ ಮನೆಯಲ್ಲೇ ಬಿಟ್ಟು ಬೀಗ ಹಾಕಿ ಹೊರಟಿದ್ದೆ. ಹೊರಟ ಪಯಣ ಸುಲಭವಿರಲಿಲ್ಲ. ಬಹಳ ದಿನಗಳ ನಂತರ ತಿರುಗಲು ಹೊರಟಿದ್ದೆ. ಕೊನೆಯ ಕ್ಷಣದಲ್ಲಿ ಆದ ಬದಲಾವಣೆಯಿಂದ ಮನೆಯಿಂದ ಹೊರ ಬೀಳಲು ಮನಸ್ಸಿರಲಿಲ್ಲ. ಪ್ರತಿ ಬಾರಿ ನನ್ನ ಸ್ನೇಹಿತರ ಗುಂಪು ಪ್ರವಾಸದ ಬಗ್ಗೆ ಹೇಳಿದಾಗ ಏನೋ ಕುಂಟು ನೆಪ ಹೇಳಿ ತಪ್ಪಿಸಿಕೊಳ್ಳುವೆ ಎಂಬ ಅಪವಾದ ನನ್ನ ಮೇಲಿತ್ತು. ಈ ಬಾರಿ ಏನು ಯೋಚಿಸ...
    ಬಹಳ ದಿನಗಳ ನಂತರ ಪ್ರಯಾಣ ಬೆಳೆಸಿದ್ದೆ, ಎಷ್ಟು ದಿನ, ಎಲ್ಲಿ ಏನು ಎತ್ತ ಎಂಬ ತಯಾರಿ ಇರಲಿಲ್ಲ... ಹಾಗೆ ಇಷ್ಟು ದಿನದಲ್ಲಿ ಇಷ್ಟು ಸ್ಥಳ ನೋಡಿ ಮುಗಿಸಬೇಕೆಂಬ ಒಡಂಬಡಿಕೆ ಇರಲಿಲ್ಲ. ಪಿ ಎಚ್ ಡಿ ಮುಗಿದ ಮೇಲೆ  ತಲೆ ಕೊಡವಿ ಕೊಳ್ಳಲು, ತಲೆ ಭಾರ ಇಳಿಸಲು, ನನ್ನೊಂದಿಗೆ ನಾನು ಕಳೆಯಲು ಒಂದಿಷ್ಟು ಸುತ್ತ ಬೇಕಿತ್ತು... ಸುಮಾರು ೪ ವರ್ಷ ನಾನು ನನ್ನ ಓದು ಎಂದು ಕಳೆದಿದ್ದೆ.
    ಸಮಯ ಇತ್ತು, ಅದಕ್ಕೆ ಹಗಲು ಪ್ರಯಾಣ ಆರಂಭಿಸಿದ್ದು, ಹುಬ್ಬಳ್ಳಿಯಿಂದ ಪುಣೆಯ ವರೆಗೆ, ಒಂದೊಂದು ಜಿಲ್ಲೆ ದಾಟುವಾಗಲೂ ಬದಲಾಗುವ  ಜೀವನ ಶೈಲಿ, ಅಲ್ಲಿಯ ಮನೆ, ವಠಾರ, ಜನರ ಹಾವ ಭಾವದಿಂದ ತಿಳಿಯುತ್ತಿತ್ತು. ಒಂದಿಷ್ಟು ನೆಲ ಹಸಿರು ಹೊದ್ದಿದ್ದರೆ, ನಡುನಡುವೆ ನೀರ ಹೊದಿಕೆ. ಪುಣೆಯ ಕಡೆ ಸಾಗಿದಂತೆ ಸುಂದರವಾಗಿ ಕಲ್ಲು ಗುಡ್ಡದ ನಡುವೆ ಎದ್ದು ನಿಂತ ಪಟ್ಟಣಗಳು. ಸುಮಾರು ಸತಾರ ದಾಟುವವರೆಗೂ ಬೆಳಕಿತ್ತು, ಸೂರ್ಯಾಸ್ತ, ಅವನ ಬೆಳಕಲ್ಲಿ ಮಿಂದೇಳುವ ನದಿ ಕಾಲುವೆ, ಕೆರೆ, ಗದ್ದೆಯ ಫೋಟೋ ತೆಗೆಯುತ್ತಾ ಸಾಗುವಾಗ ಸಮಯ ಸಾಗಿದ್ದೆ ತಿಳಿಯಲಿಲ್ಲ.





    ತುಸುಬೆಳಕಲ್ಲಿ ಕಾಣುವ ದೊಡ್ಡ ದೊಡ್ಡ ಕಲ್ಲು ಬಂಡೆಗಳ ಗುಡ್ಡಗಳ ಸಾಲು. ನಂತರ ಜಗಮಗ ಲೋಕ, ನಕ್ಷತ್ರ ಪುಂಜ ಹೀಗೆ ನೋಡ ನೋಡುತ್ತಾ ಮಹಾನಗರಿಗೆ ಕಾಲಿಟ್ಟೆ. ಬಾಗಲಕೋಟೆ ಯಲ್ಲಿ ಇರಲು ಪ್ರಾರಂಭಿಸಿದ ಮೇಲೆ, ಜನರು, ಪ್ರದೂಷಣೆ, ಗಲಾಟೆ ಎಲ್ಲದರಿಂದ ದೂರ ವಾಗಿದ್ದೆ, ಬೆಂಗಳೂರಲ್ಲಿ ಮೊದಲು ಇದ್ದರೂ, ಈಗ ಹೊಸತಾಗಿ ಹೊಸ ಜಗತ್ತಿಗೆ ಕಾಲಿಟ್ಟ ಅನುಭವ. ಅಲ್ಲಿದ್ದಿಲ್ಲಿಗೂ ರಸ್ತೆ ಬದಿಗಳಲ್ಲಿ ಜನರನ್ನು ಸೆಳೆಯಲು, ಬಣ್ಣ ಬಣ್ಣದ ಬೆಳಕಿನಿಂದ ಅಲಂಕೃತಗೊಂಡ ಡಾಬಾ, ಬೇಕರಿ, ಉಪಹಾರ ಗೃಹಗಳು.. ವಿಚಿತ್ರ ಎಂದರೆ, ಎದುರಿನಿಂದ ಅಷ್ಟು ಜಗ ಜಗಿಸಿದರೂ, ಕಾಂಕ್ರೀಟ್ ಇಲ್ಲದೆ ಲೋಹದ ತಗಡಿನಿಂದ ಕಟ್ಟಿದ್ದವು, ಎಷ್ಟು ಸುರಕ್ಷಿತ, ಹಾಗೂ ಬೇಸಿಗೆಯಲ್ಲಿ ಅವರ ಕತೆ ಏನೋ ಎನ್ನಿಸಿತು.. ಬಹುಶಃ ಕಳ್ಳ ಕಾಕರು ಕಮ್ಮಿ ಇರಬೇಕು. ಆದರೆ ಇತ್ತೀಚೆಗೆ ಕಟ್ಟಿರುವ ಚಹಾ ಅಂಗಡಿಯಿಂದ ಹಿಡಿದು ಕಾರ್ ಶೋ ರೂಮ್ ಗಳ‌ ವರೆಗೂ ಹಾಗೆ ಇದ್ದವು. 
    ಸಹನಿ ನನ್ನ ಕರೆದುಕೊಂಡು ಹೋಗಲು ಬರುವವಳಿದ್ದಳು, ಕಾಯುತ್ತ ನಿಂತಿದ್ದೆ signal ಜನಜಂಗುಳಿಯಲ್ಲಿ. ಅಷ್ಟರಲ್ಲಿ ನನ್ನನ್ನೊಬ್ಬ ರಿಕ್ಷಾ ಚಾಲಕ ಮರಾಠಿ ಯಲ್ಲಿ ಮಾತನಾಡಿಸಿದ. ರಾತ್ರಿ ಬೇರೆ ಅಪರಿಚಿತ ಜಾಗ, ನಾನು ಅಷ್ಟಾಗಿ ಗಮನಿಸದಂತೆ ಮತ್ತೆಲ್ಲೋ ನೋಡುತ್ತ ನಿಂತೆ, madam aapke ghadi, ಎಂದು ಆ ನಾಲ್ಕು ರಸ್ತೆಯ ಸಿಗ್ನಲ್ ಲಿ ಸ್ವಲ್ಪ ರಿಕ್ಷಾ ನಿಲ್ಲಿಸಿ  ಹೇಳಿ ತನ್ನ ಪಾಡಿಗೆ ಹೋದ, ಆಗ ಕೈ ನೋಡಿಕೊಂಡೆ, ನನ್ನ ಚೀಲಕ್ಕೆ ತಡುವಿ ಬಿದ್ದಿತ್ತು ಬಹುಶಃ, ಅಲ್ಲಿದ್ದ ಇಬ್ಬರು ಕೆಳಗೆ ಎಂದು ಸನ್ನೆ ಮಾಡಿದರು, ನಾನು  watch ಕೈಲಿ ಹಿಡಿದು thank you ಎನ್ನುವುದರೊಳಗಾಗಿ ಅವನು ತನ್ನ ದಾರಿಯಲ್ಲಿ ಸಾಗಿಯಾಗಿತ್ತು. ಅಣ್ಣ ಕೊಡಿಸಿದ watch, ಒಮ್ಮೆ ಎದೆಗೊತ್ತಿಕೊಂಡೆ. ಕಳೆದ ಬಾರಿ ಕೂತಲ್ಲೆ ಅಣ್ಣ ಕೊಟ್ಟ watch ಕಳೆದುಕೊಂಡಿದ್ದೆ, ಎಷ್ಟು ಹುಡುಕಿದರೂ ಸಿಕ್ಕಿರಲಿಲ್ಲ. ಕಳೆದಿದ್ದು ಸಿಗ ಬೇಕೆಂದರೆ ಅವನ್ಯಾರೊ ಪುಣ್ಯಾತ್ಮ ನಿಮಿತ್ತನಾಗಿದ್ದ, ಹಾಗೆಯೇ ಅಲ್ಲವೇ, ನಮಗೆ ಸಲ್ಲ ಬೇಕಾದ್ದು ಹೇಗಾದರೂ ಸೇರಿಯೇ ತೀರುತ್ತದೆ. ಮುಂದುವರಿಯುವುದು....

ರಾಧೆ...🎶

Comments

Popular posts from this blog