ಬರವಣಿಗೆ, ಒಂದು ಸುಂದರ ಅನುಭವ. ವರ್ಷಗಳೇ ಕಳೆದು ಹೋಗಿತ್ತು, ಮನಸ್ಸಿಟ್ಟು ಬರೆಯದೆ. ನನಗೆ ಬರವಣಿಗೆಯ ಜೊತೆ ಒಂದಿಷ್ಟು ಒಳ ಒಪ್ಪಂದ ಇದೆ. ಯಾವುದೇ ರೀತಿಯ ಹೊರ ಪ್ರಪಂಚದ ಪ್ರಭಾವ ಬೀರದೆ, ಬಹುಮುಖ್ಯವಾಗಿ ಸಾಮಾಜಿಕ ಜಾಲತಾಣ, ಸಿನಿಮಾ, ಯಾರೋ ಬರೆದ ಸಾಲುಗಳು... ಹಾಗಂತ ಮುಖತಃವಾಗಿ ಪರಿಚಯವಾದ ಪ್ರತಿಯೊಂದು ವ್ಯಕ್ತಿ, ಜೀವಿ, ವಸ್ತು, ಸಂಗತಿಗಳಲ್ಲಿ ಜೀವಿಸ ಬಯಸುತ್ತೇನೆ. ಬಹುಶಃ ನಾವು ಜೀವನ ಪೂರ್ತಿ ಯಾವುದೋ ಸಂಕೋಲೆಯ ಸಂತೆಯಲ್ಲಿ ಕಳೆದುಹೋದ ನಮ್ಮನ್ನು ಹುಡುಕುತ್ತಿರುತ್ತೇವೆ. ಅನುಭವದಿಂದ ಮಾಗಿದ ಮನಸ್ಸಿಗೆ ಆ ಹಳೆಯ ನಾವು ಕಂಡರೂ ಕಾಣದಂತೆ ಮಾಡಿ ಹೊಸ ಅಂಗಿ ತೊಟ್ಟ ನಮ್ಮನ್ನೇ ಅಪ್ಪಿಕೊಳ್ಳುವುದು, ಆದರೆ ಹುಡುಕಾಟ ನಿರಂತರ. ಬಹುಶಃ ಈ ಲೌಕಿಕ ಜಗತ್ತಿನಲ್ಲಿ ಇರುವಾಗ, ಇದಕ್ಕೂ ಆಳಕ್ಕಿಳಿದರೆ ಅಪಾಯವೇ ಸರಿ. ನಾನು ಭಗವದ್ಗೀತೆಯಲ್ಲಿ ನಂಬಿದ ಸಾಲುಗಳೆಂದರೆ ನಮಗೆ ಸೇರಬೇಕಾಗಿದ್ದು ನಮಗೆ ಸೇರಿಯೇ ತೀರುವುದು. ಪ್ರಯತ್ನ ಇರಬೇಕು ಅಷ್ಟೇ. ಇದ್ದ ಕೆಲಸ ಬಿಟ್ಟಿದ್ದೆ, ಮುಂದೆ ಏನು ಎಂಬ ಚಿಂತೆ ಮನೆಯಲ್ಲೇ ಬಿಟ್ಟು ಬೀಗ ಹಾಕಿ ಹೊರಟಿದ್ದೆ. ಹೊರಟ ಪಯಣ ಸುಲಭವಿರಲಿಲ್ಲ. ಬಹಳ ದಿನಗಳ ನಂತರ ತಿರುಗಲು ಹೊರಟಿದ್ದೆ. ಕೊನೆಯ ಕ್ಷಣದಲ್ಲಿ ಆದ ಬದಲಾವಣೆಯಿಂದ ಮನೆಯಿಂದ ಹೊರ ಬೀಳಲು ಮನಸ್ಸಿರಲಿಲ್ಲ. ಪ್ರತಿ ಬಾರಿ ನನ್ನ ಸ್ನೇಹಿತರ ಗುಂಪು ಪ್ರವಾಸದ ಬಗ್ಗೆ ಹೇಳಿದಾಗ ಏನೋ ಕುಂಟು ನೆಪ ಹೇಳಿ ತಪ್ಪಿಸಿಕೊಳ್ಳುವೆ ಎಂಬ ಅಪವಾದ ನನ್ನ ಮೇಲಿತ್ತು. ಈ ಬಾರಿ ಏನು ಯೋಚಿಸ...

ಕಾಲಚಕ್ರ

ಹಬ್ಬದ ಸಂಭ್ರಮದಿ ಸಜ್ಜಾಗಿತ್ತು ನಗರಿಯೆಲ್ಲಾ
ಊರ ದಾರಿಯಲಿ ಮಾತ್ರ ಬಣ - ಬಣ
ಮುದಿ ಜೀವವೆರಡು ಉಸಿರಿಡಿದು ಕೂತಿತ್ತು
ಕರುಳು - ಕುಡಿಗಳ ಆಗಮನಕೆಂದು

ಇನಿಯನ ಗಟ್ಟಿಕರೆ ಕೇಳದಾ ಕಿವಿಗೆ,
ಬಾರಿ-ಬಾರಿಗೂ ಕೇಳುವ ಗಾಡಿಯ ನಗಾರಿ
ನಿಲ್ಲಲಾಗದ ಸೊಂಟ, ದೂರ ಹಾಯದ ದೃಷ್ಟಿ
ಆದರೂ ಸುಳಿಯುತಿದೆ, ಹೊಸಿಲಿಂದ ಕೋಣೆಗೆ

ಹುರುಪಲ್ಲಿ ಕಟ್ಟಿಟ್ಟ ಹೋಳಿಗೆ -ಲಾಡು,
ಸೈನಿಕನಂತೆ ಕಾದಿರಿಸಿಹ ಹಬೆಯಾಡುವ ಹುಗ್ಗಿ,
ಮರಿ - ಜೀವಗಳಿಗೆ ಉಪಚರಿಸುವ ಹಂಬಲದಿ,
ಸೋತ ಕೈ, ಎಳೆವ ಕಾಲು ಗೌಣ್ಯವಾಗಿತ್ತು

ಏನೋ ಬಡ - ಬಡಿಸುತ್ತ,  ತಿರುಗಾಡುತ್ತಿರೆ ಈ ಜೀವ
 'ನಿನಗೆಲ್ಲೊ ಮರುಳು' ಎಂದು ಮುಸಿನಗುತ್ತಿದ್ದ ಒಡೆಯ
'ಅವನ್ಹೋಗಲಿ, ಅವಳಾರು ಬರಬಾರದಿತ್ತೆ' ಎಂಬ ಬೊಚ್ಚುಬಾಯಿಗೆ,
ಗೊತ್ತಿಲ್ಲದೆ ನುಗ್ಗಿದ್ದಳು ಗಂಗಾ ಮಾತೆ

ರೋಧಿಸುವ ಕಂಗಳಿಗೆ, ನಡುಗುವಾ ಕೈಯ ಸಾಂತ್ವನ
'ನನಗೆ - ನೀನು, ನಿನಗೆ ನಾನು,
ಬರುವಾಗ ಬರುವರು, ಬಿಡು ಬೇಡದ ಚಿಂತೆ,
ಬಿರಿ ನಿನ್ನ ಚೆಂದುಟಿ, ಹಗುರಾಗಲಿ ಮನ'

ಎಲ್ಲಕ್ಕೂ ಮೂಖ ಸಾಕ್ಷಿಯಾದ ಗೋಡೆ - ಕಂಬಗಳು.
                 
                                                       ರಾಧೆ.... 🎶


Comments

Popular posts from this blog