ಬರವಣಿಗೆ, ಒಂದು ಸುಂದರ ಅನುಭವ. ವರ್ಷಗಳೇ ಕಳೆದು ಹೋಗಿತ್ತು, ಮನಸ್ಸಿಟ್ಟು ಬರೆಯದೆ. ನನಗೆ ಬರವಣಿಗೆಯ ಜೊತೆ ಒಂದಿಷ್ಟು ಒಳ ಒಪ್ಪಂದ ಇದೆ. ಯಾವುದೇ ರೀತಿಯ ಹೊರ ಪ್ರಪಂಚದ ಪ್ರಭಾವ ಬೀರದೆ, ಬಹುಮುಖ್ಯವಾಗಿ ಸಾಮಾಜಿಕ ಜಾಲತಾಣ, ಸಿನಿಮಾ, ಯಾರೋ ಬರೆದ ಸಾಲುಗಳು... ಹಾಗಂತ ಮುಖತಃವಾಗಿ ಪರಿಚಯವಾದ ಪ್ರತಿಯೊಂದು ವ್ಯಕ್ತಿ, ಜೀವಿ, ವಸ್ತು, ಸಂಗತಿಗಳಲ್ಲಿ ಜೀವಿಸ ಬಯಸುತ್ತೇನೆ. ಬಹುಶಃ ನಾವು ಜೀವನ ಪೂರ್ತಿ ಯಾವುದೋ ಸಂಕೋಲೆಯ ಸಂತೆಯಲ್ಲಿ ಕಳೆದುಹೋದ ನಮ್ಮನ್ನು ಹುಡುಕುತ್ತಿರುತ್ತೇವೆ. ಅನುಭವದಿಂದ ಮಾಗಿದ ಮನಸ್ಸಿಗೆ ಆ ಹಳೆಯ ನಾವು ಕಂಡರೂ ಕಾಣದಂತೆ ಮಾಡಿ ಹೊಸ ಅಂಗಿ ತೊಟ್ಟ ನಮ್ಮನ್ನೇ ಅಪ್ಪಿಕೊಳ್ಳುವುದು, ಆದರೆ ಹುಡುಕಾಟ ನಿರಂತರ. ಬಹುಶಃ ಈ ಲೌಕಿಕ ಜಗತ್ತಿನಲ್ಲಿ ಇರುವಾಗ, ಇದಕ್ಕೂ ಆಳಕ್ಕಿಳಿದರೆ ಅಪಾಯವೇ ಸರಿ. ನಾನು ಭಗವದ್ಗೀತೆಯಲ್ಲಿ ನಂಬಿದ ಸಾಲುಗಳೆಂದರೆ ನಮಗೆ ಸೇರಬೇಕಾಗಿದ್ದು ನಮಗೆ ಸೇರಿಯೇ ತೀರುವುದು. ಪ್ರಯತ್ನ ಇರಬೇಕು ಅಷ್ಟೇ. ಇದ್ದ ಕೆಲಸ ಬಿಟ್ಟಿದ್ದೆ, ಮುಂದೆ ಏನು ಎಂಬ ಚಿಂತೆ ಮನೆಯಲ್ಲೇ ಬಿಟ್ಟು ಬೀಗ ಹಾಕಿ ಹೊರಟಿದ್ದೆ. ಹೊರಟ ಪಯಣ ಸುಲಭವಿರಲಿಲ್ಲ. ಬಹಳ ದಿನಗಳ ನಂತರ ತಿರುಗಲು ಹೊರಟಿದ್ದೆ. ಕೊನೆಯ ಕ್ಷಣದಲ್ಲಿ ಆದ ಬದಲಾವಣೆಯಿಂದ ಮನೆಯಿಂದ ಹೊರ ಬೀಳಲು ಮನಸ್ಸಿರಲಿಲ್ಲ. ಪ್ರತಿ ಬಾರಿ ನನ್ನ ಸ್ನೇಹಿತರ ಗುಂಪು ಪ್ರವಾಸದ ಬಗ್ಗೆ ಹೇಳಿದಾಗ ಏನೋ ಕುಂಟು ನೆಪ ಹೇಳಿ ತಪ್ಪಿಸಿಕೊಳ್ಳುವೆ ಎಂಬ ಅಪವಾದ ನನ್ನ ಮೇಲಿತ್ತು. ಈ ಬಾರಿ ಏನು ಯೋಚಿಸ...
ಕಾರಣ ಹುಡುಕ ಬೇಡ....
ಎಂದೋ ಹುಟ್ಟಿಹೆ, ಕಾರಣ ನಾನಲ್ಲ,
ಎಂದೋ ಸಾಯುವೆ ಕೂಡ, ಕಾರಣ ತಿಳಿದಿಲ್ಲ,
ನಿಮ್ಮ ಹರಕೆ, ಹಾರೈಕೆ ಎಲ್ಲಾ ನನಗೆ, ಕಾರಣ ಗೊತ್ತಿಲ್ಲ
ನಿಮ್ಮ ಸೈರಣೆ, ತಿರಸ್ಕಾರ ಎಲ್ಲಾ ನನಗೆ, ಕಾರಣ ಗೊತ್ತಿಲ್ಲ.
ಕಂಡಾಗ ಮುಗುಳ್ನಗುವೆ, ಕಾರಣವಿಲ್ಲದೆ,
ಮಾತನಾಡಿಸಿದರೆ, ಮಾತನಾಡುವೆ, ಕಾರಣ ಬೇಕಿಲ್ಲದೆ,
ಒದ್ದೆ ಚಾದರ ಹೊದ್ದೂ ನಗುವ ತಿರುಕನಿಗೆ ಕಣ್ಣೀರಿಡುವೆ, ಕಾರಣವಿಲ್ಲದೆ,
ನಿತ್ಯ ಬಾಲವಾಡಿಸಿ ಬರುವ ಮುದ್ದು ಮರಿಗೆ, ಹಲ್ಲು ಕಿರಿವೆ, ಕಾರಣ ಗೊತ್ತಿಲ್ಲ
ಬಿಟ್ಟಿಹೆ ಎಲ್ಲ ಹುಡುಕಾಟ,
ಮಾಡುವ ಮಾಟಕ್ಕೆ, ನೋಡುವ ನೋಟಕ್ಕೆ,
ಕಾರಣ ಬೇಕಿಲ್ಲ....
ಖುಷಿಯ ಹೊರತಾಗಿ...
ರಾಧೆ...🎶

Comments

Popular posts from this blog