ಬರವಣಿಗೆ, ಒಂದು ಸುಂದರ ಅನುಭವ. ವರ್ಷಗಳೇ ಕಳೆದು ಹೋಗಿತ್ತು, ಮನಸ್ಸಿಟ್ಟು ಬರೆಯದೆ. ನನಗೆ ಬರವಣಿಗೆಯ ಜೊತೆ ಒಂದಿಷ್ಟು ಒಳ ಒಪ್ಪಂದ ಇದೆ. ಯಾವುದೇ ರೀತಿಯ ಹೊರ ಪ್ರಪಂಚದ ಪ್ರಭಾವ ಬೀರದೆ, ಬಹುಮುಖ್ಯವಾಗಿ ಸಾಮಾಜಿಕ ಜಾಲತಾಣ, ಸಿನಿಮಾ, ಯಾರೋ ಬರೆದ ಸಾಲುಗಳು... ಹಾಗಂತ ಮುಖತಃವಾಗಿ ಪರಿಚಯವಾದ ಪ್ರತಿಯೊಂದು ವ್ಯಕ್ತಿ, ಜೀವಿ, ವಸ್ತು, ಸಂಗತಿಗಳಲ್ಲಿ ಜೀವಿಸ ಬಯಸುತ್ತೇನೆ. ಬಹುಶಃ ನಾವು ಜೀವನ ಪೂರ್ತಿ ಯಾವುದೋ ಸಂಕೋಲೆಯ ಸಂತೆಯಲ್ಲಿ ಕಳೆದುಹೋದ ನಮ್ಮನ್ನು ಹುಡುಕುತ್ತಿರುತ್ತೇವೆ. ಅನುಭವದಿಂದ ಮಾಗಿದ ಮನಸ್ಸಿಗೆ ಆ ಹಳೆಯ ನಾವು ಕಂಡರೂ ಕಾಣದಂತೆ ಮಾಡಿ ಹೊಸ ಅಂಗಿ ತೊಟ್ಟ ನಮ್ಮನ್ನೇ ಅಪ್ಪಿಕೊಳ್ಳುವುದು, ಆದರೆ ಹುಡುಕಾಟ ನಿರಂತರ. ಬಹುಶಃ ಈ ಲೌಕಿಕ ಜಗತ್ತಿನಲ್ಲಿ ಇರುವಾಗ, ಇದಕ್ಕೂ ಆಳಕ್ಕಿಳಿದರೆ ಅಪಾಯವೇ ಸರಿ. ನಾನು ಭಗವದ್ಗೀತೆಯಲ್ಲಿ ನಂಬಿದ ಸಾಲುಗಳೆಂದರೆ ನಮಗೆ ಸೇರಬೇಕಾಗಿದ್ದು ನಮಗೆ ಸೇರಿಯೇ ತೀರುವುದು. ಪ್ರಯತ್ನ ಇರಬೇಕು ಅಷ್ಟೇ. ಇದ್ದ ಕೆಲಸ ಬಿಟ್ಟಿದ್ದೆ, ಮುಂದೆ ಏನು ಎಂಬ ಚಿಂತೆ ಮನೆಯಲ್ಲೇ ಬಿಟ್ಟು ಬೀಗ ಹಾಕಿ ಹೊರಟಿದ್ದೆ. ಹೊರಟ ಪಯಣ ಸುಲಭವಿರಲಿಲ್ಲ. ಬಹಳ ದಿನಗಳ ನಂತರ ತಿರುಗಲು ಹೊರಟಿದ್ದೆ. ಕೊನೆಯ ಕ್ಷಣದಲ್ಲಿ ಆದ ಬದಲಾವಣೆಯಿಂದ ಮನೆಯಿಂದ ಹೊರ ಬೀಳಲು ಮನಸ್ಸಿರಲಿಲ್ಲ. ಪ್ರತಿ ಬಾರಿ ನನ್ನ ಸ್ನೇಹಿತರ ಗುಂಪು ಪ್ರವಾಸದ ಬಗ್ಗೆ ಹೇಳಿದಾಗ ಏನೋ ಕುಂಟು ನೆಪ ಹೇಳಿ ತಪ್ಪಿಸಿಕೊಳ್ಳುವೆ ಎಂಬ ಅಪವಾದ ನನ್ನ ಮೇಲಿತ್ತು. ಈ ಬಾರಿ ಏನು ಯೋಚಿಸ...

ಬಾಲ್ಯದ ಅಂಬಾರಿ 
ಓಡುವ ಮೇಘದಲಿ ಅಂಬಾರಿ ಹೊರಟಿದ್ದೆ
ಹಿಂದೆ ಮುಂದೆ ನನ್ನ ಭಟರು
ನನ್ನ ಸಾರೋಟಿಗೆ ಸೂರ್ಯನ ರಂಗಿನಂಚು
ಕ್ಷಣ ಕ್ಷಣಕೂ ಹೊಸ ಮೆರುಗು 

ಅಂಬಾರಿ ಇಳಿವಾಗ, ವಿರಹ ವೇದನೆ ಅವಕೆ
ಕೆಂಪಾದ ಕೆನ್ನೆ ಕಪ್ಪಿಟ್ಟಿತ್ತು
ನಾಳೆ ಸಿಗುವೆಯೆಂದು ಗಾಳಿಗೆ ಮುತ್ತಿಡಲು
ನನ್ನಿಯ ನಗುತಿದ್ದ ಬಾಚಿಕೊಂಡು
ಸ್ಪರ್ಧೆಯೇ ಏರ್ಪಟ್ಟತ್ತು ನಮ್ಮ ನಡುವೆ
ಅವನ ಬಳಗದ ಪ್ರದರ್ಶನ ಸಾಗಿತ್ತು
ಒಬ್ಬೊಬ್ಬರಾಗಿ ಇಣುಕುತ್ತಿದ್ದರು ನನ್ನ ನೋಡಲು
ಪಾಪ ಅವನಿಗೇನು ಗೊತ್ತು, ಆದರೂ ನಗುತ್ತಿದ್ದ

ಪಕ್ಷಿಗಳ ಸಂಗೀತ
ನವಿಲ ನರ್ತನ
ಮರಗಿಡಗಳ ಧಿವ್ಯ ಸಾನಿಧ್ಯ
ಕಲ್ಲು-ಬಂಡೆಗಳ ಸರ್ಪಗಾವಲು
ಸೌಗಂಧ ಹೊತ್ತು ತಂದ ತಂಬೆಲರು
ನನ್ನ ಸಭೆಗೆ

ಅವಗೆ ನನ್ನ ಬಳಗ ತೋರಿಸಿ, ಅಣುಕಿಸಲಿದ್ದೆ
ಅಮ್ಮ ಕರೆದಳು, ಕತ್ತಲಾಯಿತು
ಹುಳು-ಹುಪ್ಪಟ ಮೆಟ್ಟೀತು
ಬಂದೆ, ಅಮ್ಮಾ...
ಅಯ್ಯೋ ದಾರಿ ಮಸುಕಾಗಿದೆ
ನಾಳೆ ಬರುವೆ ಮತ್ತೆ, ನಗಬೇಡ ಹೀಗೆ
ನನ್ನ ಹುಸಿ ಕೋಪಕ್ಕೆ ಮತ್ತಷ್ಟು ಹೊಳಪಾದ
ಸಿಂಹಾಸನವಿಳಿದು ಗುಡಿಸಲಿಗೆ ಹೊರಟೆ
ಮಿಣುಕು ದೀಪ ಉರಿಯುತ್ತಿತ್ತು...
ರಾಧೆ...🎶

Comments

Popular posts from this blog